- News18 Kannada
- Last Updated: April 16, 2021, 7:50 AM IST
ಕೋಲಾರ (ಏ. 16): ಪ್ರೀತಿಯಲ್ಲಿ ಮಿಂದೇಳುವ ಪ್ರೇಮಿಗಳಿಗೆ ಅವರದೇ ಆದ ನಿರ್ಧಾರಗಳನ್ನ ತಗೆದುಕೊಳ್ಳುವುದು, ಇವತ್ತಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಕಾಣಬಹುದಾಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಹೋಬಳಿಯ ಆಡಂಪಲ್ಲಿ ಗ್ರಾಮದ ನಿವಾಸಿಗಳಾದ ಮುರುಗೇಶ್ ಹಾಗೂ ಶೈಲಾ ನಡುವೆ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿ ಹುಟ್ಟಿಕೊಂಡಿದ್ದು, ಒಬ್ಬರಿಗೊಬ್ಬರು ಮನಸಾರೆ ಪ್ರೀತಿಸಿ ಮದುವೆ ಸಹ ಆಗಿದ್ದಾರೆ. ಆದರೆ ಒಂದೇ ಜಾತಿ, ಒಂದೇ ಊರಿನವರಾದರೂ ಎರಡೂ ಕುಟುಂಬಸ್ಥರಿಗೆ ಇವರಿಬ್ಬರು ಮದುವೆ ಆಗೋದು ಸುತಾರಾಂ ಇಷ್ಟವಿರಲಿಲ್ಲ.
ಆದರೂ ನಾವಿಬ್ಬರು ಒಬ್ಬರಿಗೊಬ್ಬರು ಬಿಟ್ಟು ಬದುಕೋದಿಲ್ಲ ಅಂತ ತೀರ್ಮಾನಕ್ಕೆ ಬಂದಿದ್ದ ಯುವ ಪ್ರೇಮಿಗಳು ಮದುವೆ ಆಗಿ, ಜೀವನವನ್ನು ಆರಂಭಿಸಿದ್ದರು. ಒಂದೂವರೆ ವರ್ಷದ ಹಿಂದೆ ಇಬ್ಬರು ಗ್ರಾಮವನ್ನೇ ತೊರೆದು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಅನ್ಯೋನ್ಯವಾಗಿ ಸಾಗಿಸುತ್ತಿದ್ದರು. ಆದರೆ ಇಬ್ಬರ ನಡುವೆ ಅದೇನಾಯಿತೊ ಗೊತಿಲ್ಲ, ಕಳೆದ 6 ತಿಂಗಳಿನಿಂದ ಈಚೆಗೆ ಮತ್ತೆ ಗ್ರಾಮಕ್ಕೆ ವಾಪಾಸಾಗಿದ್ದಾರೆ. ಶೈಲಾ ಅವರ ತಾಯಿ ಮನೆಯಲ್ಲೇ ಇಬ್ಬರು ಜೀವನ ಸಾಗಿಸುತ್ತಿದ್ದು, ಬುಧವಾರ ರಾತ್ರಿ ಇವರಿಬ್ಬರ ನಡುವೆ ಅದೇನಾಯಿತೊ ಗೊತ್ತಿಲ್ಲ, ಇಬ್ಬರು ಹೆಣವಾಗಿ ಪತ್ತೆಯಾಗಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇಬ್ಬರ ನಡುವೆ ಕಳೆದ ಏಳೆಂಟು ತಿಂಗಳಿನಿಂದ ಸಣ್ಣಪುಟ್ಟ ಮನಸ್ತಾಪಗಳು ಬಂದುಹೋಗಿದೆ. ಪ್ರತಿಯೊಂದು ವಿಚಾರಕ್ಕೂ ಇಬ್ಬರು ಜಗಳ ಮಾಡಿಕೊಳ್ಳುತ್ತಿದ್ದು, ಅದೆಷ್ಟೋ ಬಾರಿ ಎರಡು ಮನೆಯವರು ಸೇರಿಕೊಂಡು ರಾಜಿ ಸಂಧಾನ ಸಹ ಮಾಡಿ ಸಂಸಾರವನ್ನ ಅನ್ಯೋನ್ಯವಾಗಿ ನಡೆಸಿಕೊಂಡು ಹೋಗಿ ಎಂದು ಬುದ್ದಿ ಮಾತನ್ನು ಹೇಳಿರುತ್ತಾರೆ. ಮೊದಲೇ ಪ್ರೀತಿಸಿ ಮದುವೆಯಾಗಿದ್ದೀರಿ ಏನಾದರು ಮಾಡಿಕೊಳ್ಳಿ ಅಂತ ಕಳೆದ ಮೂರು ತಿಂಗಳಿನಿಂದ ಎರಡೂ ಮನೆ ಕಡೆಯವರು ಇವರಿಬ್ಬರ ಸಹವಾಸಕ್ಕೆ ಹೋಗಲಿಲ್ಲ.
ಇದನ್ನೂ ಓದಿ: ಪಕ್ಕದ ಮನೆಯ ಅಂಕಲ್ ಜೀವ ಉಳಿಸಲು ಹೂವು ಮಾರಿ ಹಣ ಸಂಗ್ರಹಿಸಿದ 8 ವರ್ಷದ ಬಾಲಕಿ!
ಬುಧವಾರ ತಡ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮತ್ತೆ ಇಬ್ಬರು ಜಗಳ ಮಾಡಿಕೊಂಡಿದ್ದು, ಇದೇ ವೇಳೆ ಮುರುಗೇಶನ ಕೋಪ ವಿಪರೀತಕ್ಕೆ ಹೋಗಿ ಅಲ್ಲೇ ಇದ್ದ ಮಚ್ಚಿನಿಂದ ಶೈಲಾಳ ಕತ್ತು ಹಾಗೂ ಹೊಟ್ಟೆ ಭಾಗದಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಪತ್ನಿ ಮೃತಪಟ್ಟಳೆಂದು ಭಯಗೊಂಡು, ತಾನೂ ಸಹ ಮನೆಯ ಹೊರಗಡೆ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಒಟ್ಟಾರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಜೊತೆಗೆ ಒಂದೊತ್ತು ಊಟ ಮಾಡಬೇಕಿದ್ದರೂ ದುಡಿಯುವ ಅನಿವಾರ್ಯತೆಯ ದುಡಿಮೆಯ ಜೀವನ ಇವರದ್ದು. ಇಂತಹ ಪರಿಸ್ಥಿತಿಯಲ್ಲೂ ಒಬ್ಬರಿಗೊಬ್ಬರು ಬಿಟ್ಟಿರಲಾದಷ್ಟೂ ಪ್ರೀತಿ ಮಾಡಿದ ಯುವ ಪ್ರೇಮಿಗಳು, ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ದಿಢೀರನೆ ಒಟ್ಟಿಗೆ ಸಾವನಪ್ಪಿದ್ದಾರೆ. ಆದರೆ ಅದೇನೆ ಜಗಳವಿದ್ದರು ಒಮ್ಮೆ ಕೂತು ಮಾತನಾಡಿ ಬಗೆಹರಿಸಿಕೊಳ್ಳಬಹುದಿತ್ತು ಎಂಬುದು ಹಿರಿಯರ ಅಭಿಪ್ರಾಯವಾಗಿದೆ.
ಆದರೆ ಪ್ರೀತಿಗಾಗಿ ಎಲ್ಲರನ್ನು ವಿರೋಧಿಸಿದ ದಂಪತಿಯ ದುಡುಕಿನ ನಿರ್ಧಾರವೊ ಅಥವಾ ಗಂಡನ ಅತಿಯಾದ ಕೋಪದಿಂದಲೋ ಗೊತ್ತಿಲ್ಲ, ಇಬ್ಬರ ಜೀವನ ದುರಂತ ಅಂತ್ಯವಾಗಿದೆ ಎಂದರು ತಪ್ಪಾಗಲಾರದು.