- News18 Kannada
- Last Updated: April 23, 2021, 9:57 PM IST
ಬೆಂಗಳೂರು (ಏ. 23): ರಾಜ್ಯದಲ್ಲಿ ದಿನದಂದಿ ದಿನಕ್ಕೆ ದಾಖಲೆ ಬರೆಯುತ್ತಿರುವ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಇಂದಿನಿಂದ ವೀಕೆಂಡ್ ಲಾಕ್ಡೌನ್ ಘೋಷಿಸಿದೆ. ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಈ ವಿಕೇಂಡ್ ಲಾಕ್ಡೌನ್ ಜಾರಿಯಲ್ಲಿರಲಿದೆ. ಈ ಸಮಯದಲ್ಲಿ ರಾಜ್ಯದ ಜನರು ಅನಗತ್ಯವಾಗಿ ಓಡಾಟ ನಡೆಸುವಂತಿಲ್ಲ. ತುರ್ತು ಪರಿಸ್ಥಿತಿ ಹಾಗೂ ಅಗತ್ಯ ಸೇವೆಗಳಿಗಾಗಿ ಮಾತ್ರ ಅವಕಾಶವಿದ್ದು, ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮಕ್ಕೆ ಮುಂದಾಗಲಾಗುವುದು. ಹಾಲು, ತರಕಾರಿಯಂತಹ ಅಗತ್ಯ ಸೇವೆಗಳಿಗೆ ಬೆಳಗ್ಗೆ 6 ರಿಂದ ಬೆಳಗ್ಗೆ 10ಗಂಟೆವರೆಗೂ ಅವಕಾಶ ನೀಡಲಾಗಿದೆ.
ಅಗತ್ಯ ಸೇವೆಗೆ ಸಂಚಾರ: ಈ ವಿಕೇಂಡ್ ಲಾಕ್ಡೌನ್ನಲ್ಲಿ ಅಗತ್ಯ ಕೆಲಸದಲ್ಲಿರುವ ಸರ್ಕಾರಿ ನೌಕರರು ಸಂಚರಿಸಬಹುದಾಗಿದೆ. ಜೊತೆ ದಿನದ 24ಗಂಟೆ ಸೇರಿದಂತೆ ವಾರದ ಏಳು ದಿನ ಕಾರ್ಯ ನಿರ್ವಹಿಸುವ ಅಗತ್ಯ ಕೈಗಾರಿಕೆ ಸಂಸ್ಥೆಗಳು, ಅಗತ್ಯ ಸೇವೆಗಳಿಗೆ ನಿಯೋಜಿತವಾಗಿರುವವರು ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಟೆಲಿಕಾಂ, ಇಂಟರ್ನೆಟ್ ಸೇವೆ ಒದಗಿಸುವ ನೌಕರರು ಐಡಿಯೊಂದಿಗೆ ಪ್ರಯಾಣಿಸಲಿ ಅವಕಾಶ ನೀಡಲಾಗಿದೆ. ಲಸಿಕೆಗೆ ಒಳಗಾಗುವವರು ಕೂಡ ಐಡಿಯೊಂದಿಗೆ ಹಾಜರಾಗಬೇಕು
ವೈದ್ಯಕೀಯ ಸೇವೆ ಲಭ್ಯ: ವೈದ್ಯಕೀಯ ತುರ್ತು ಸೇವೆ ಇರುವವರು ಸಹಾಯಕರೊಂದಿಗೆ ಸಂಚಾರಿಸಬಹುದು. ವೈದ್ಯಕೀಯ ಸೇವೆ ಎಂದಿನಂತೆ ಇರಲಿದೆ. ಬೆಳಗ್ಗೆ ಆರರಿಂದ ಹತ್ತು ಗಂಟೆವರೆಗೆ ನಾಲ್ಕು ಗಂಟೆಗಳ ದಿನಸಿ, ಹಾಲು, ತರಕಾರಿ ಕೊಳ್ಳಲು ಸಾಮಾನ್ಯ ಜನರು ಮನೆಯಿಂದ ಹೊರಬರುವುದಾಗಿದೆ. ಆನ್ಲೈನ್ನಲ್ಲಿ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ನೀಡಲಾಗಿದ್ದು, ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ಸೇವೆ ಇರಲಿದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ ಸೇವೆ ಸೀಮಿತ: ಲಾಕ್ಡೌನ್ ಹಿನ್ನಲೆ ಕೆಎಸ್ಆರ್ಟಿಸಿ ಸೇವೆ ಸೀಮಿತವಾಗಿರಲಿದೆ. ಅಗತ್ಯ ಇರುವವರ ಸೌಲಭ್ಯಕ್ಕಾಗಿ ಸೀಮಿತ ಸಂಖ್ಯೆಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ಇರಲಿದ್ದು, ಪ್ರಯಾಣಿಕರು ಪಾಸ್ ಜೊತೆಗೆ ಕೋವಿಡ್ ನಿಯಮ ಅನುಸರಿಸುವುದು ಕಡ್ಡಾಯವಾಗಿದೆ. ಬಿಎಂಟಿಸಿ ಸೇವೆ ಕೂಡ ಇದೇ ವೇಳೆ ಸೀಮಿತವಾಗಿರಲಿದೆ.
ಮೆಟ್ರೋ ಸಂಚಾರ ರದ್ದು: ವೀಕೆಂಡ್ ಲಾಕ್ಡೌನ್ ಹಿನ್ನಲೆ ಮೆಟ್ರೋ ಸಂಚಾರವನ್ನು ಎರಡು ದಿನಗಳ ಕಾಲ ರದ್ದು ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ರಾಜ್ಯದಲ್ಲಿ ಇಂದು ಸಹ ದಾಖಲೆ ಪ್ರಮಾಣದ ಪ್ರಕರಣ ಕಂಡು ಬಂದಿದೆ. ಇಂದು ರಾಜ್ಯದಲ್ಲಿ 26,962 ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನ ಬರೋಬ್ಬರಿ 190 ಜನ ಕೊರೋನಾಗೆ ಬಲಿಯಾಗಿದ್ದಾರೆ. 8697 ಮಂದಿ ಇಂದು ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದರೆ, 1128 ಮಂದಿಗೆ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂದು 16,662 ಕೇಸ್ ಪತ್ತೆಯಾಗಿದ್ದು, ರಾಜಧಾನಿಯಲ್ಲಿ ಬರೋಬ್ಬರಿ 124 ಮಂದಿ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದಾರೆ.