- News18 Kannada
- Last Updated: June 3, 2020, 10:35 AM IST
ಕೊಡಗು: ಅದು ಜಿಲ್ಲಾ ಕೇಂದ್ರದಲ್ಲಿರುವ ಮೆಡಿಕಲ್ ಕಾಲೇಜು ಮತ್ತು ಬೋಧಕ ಆಸ್ಪತ್ರೆ. ಈ ಆಸ್ಪತ್ರೆಯಲ್ಲಿ ಕೆಲ ವರ್ಷಗಳಿಂದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷಿನ್ ಇದ್ದರೂ ಬಳಕೆಯಾಗದೇ ಧೂಳು ತಿನ್ನುತ್ತಿದೆ. ಸರ್ಕಾರಿ ಆಸ್ಪತ್ರೆ ನಂಬಿ ಬರುವ ಬಡ ರೋಗಿಗಳು ಬೇರೆ ವಿಧಿಯಿಲ್ಲದೆ ಖಾಸಗಿ ಆಸ್ಪತ್ರೆಗೆ ಹೋಗಿ ಸಾವಿರಾರು ರೂಪಾಯಿ ತೆರಬೇಕಾಗಿದೆ. ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ದಂಧೆ ಎನ್ನೋದು ಜನರ ಆರೋಪ.
ಕೊಡಗು ಜಿಲ್ಲಾಸ್ಪತ್ರೆಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಬಹಳ ಮುಖ್ಯ. ಈ ಆಸ್ಪತ್ರೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ ದಿನವೊಂದರಲ್ಲಿ ಚೆಕ್ಅಪ್ ಮಾಡಿಸಿಕೊಳ್ಳಲು ಕನಿಷ್ಟ 100 ರಿಂದ 150 ಗರ್ಭಿಣಿಯರು ಬರುತ್ತಾರೆ. ಜೊತೆಗೆ ಉದರ ಸಂಬಂಧಿ ಕಾಯಿಲೆಗಳಿಂದ ಬಳಲುವ ಸಾಕಷ್ಟು ರೋಗಿಗಳು ಇದೇ ಜಿಲ್ಲಾಸ್ಪತ್ರೆಯನ್ನೇ ನಂಬಿ ಬರುತ್ತಾರೆ. ಆದರೆ ಇಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷಿನ್ ಇದ್ದರೂ ಕಳೆದ ಮೂರು ವರ್ಷಗಳಿಂದ ಸಿಬ್ಬಂದಿ ಇಲ್ಲ ಎಂಬ ನೆಪವೊಡ್ಡಿ ಬಳಕೆಯೇ ಆಗಿಲ್ಲ. ಇದರಿಂದಾಗಿ ಈಗ ಮೆಷಿನ್ ಕೆಟ್ಟುನಿಂತಿದೆ.
ಒಂದು ತಿಂಗಳ ಹಿಂದೆ ಸ್ಕ್ಯಾನಿಂಗ್ ಸಿಬ್ಬಂದಿ ಬಂದಿದ್ದರೂ ಮೆಷಿನ್ ಕೆಟ್ಟು ಹೋಗಿರುವುದರಿಂದ ಅವರು ಸುಮ್ಮನೆ ಆಸ್ಪತ್ರೆಗೆ ಬಂದುಹೋಗುತ್ತಿದ್ದಾರೆ. ಮೆಷಿನ್ ರಿಪೇರಿ ಮಾಡುವ ಗೋಜಿಗೆ ಯಾರೂ ಹೋಗಿಲ್ಲ. ಆದರೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಸರ್ಕಾರಿ ಆಸ್ಪತ್ರೆಯನ್ನೇ ನಂಬಿ ಬರುತ್ತಿರುವ ರೋಗಿಗಳಿಗೆ ಸ್ಕ್ಯಾನಿಂಗ್ ಮಾಡಬೇಕಾದರೆ ಖಾಸಗೀ ಆಸ್ಪತ್ರೆಗಳಿಗೆ ರೆಫರ್ ಮಾಡಿಕಳುಹಿಸಲಾಗುತ್ತಿದೆ. ಇದರಿಂದಾಗಿ ಬಡವರು ಸಾವಿರಾರು ರೂಪಾಯಿಯನ್ನು ಖರ್ಚು ಮಾಡಬೇಕಾಗಿದೆ. ವೈದ್ಯರು ಒಂದು ಸ್ಕ್ಯಾನಿಂಗ್ ಅನ್ನು ಖಾಸಗಿ ಲ್ಯಾಬ್ಗೆ ಕಳುಹಿಸಿದರೆ ಹಣ ಸಿಗುತ್ತದೆ. ಹೀಗಾಗಿ, ಇದೆಲ್ಲವೂ ಯೋಜಿತವಾಗಿ ನಡೆಯುತ್ತಿರುವ ದಂಧೆ ಎಂದು ಜಯಕುಮಾರ್ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: PM Kisan Scheme - ಪಿಎಂ ಕಿಸಾನ್ ಯೋಜನೆಯ ದುಡ್ಡು ಬಂದಿಲ್ಲವೇ? ಇಲ್ಲಿದೆ ಮಾರ್ಗೋಪಾಯ
ಆಸ್ಪತ್ರೆಗೆ ಬೇಕಾಗಿರುವ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೆಷಿನ್ಗಳ ಖರೀದಿಗೆಂದು ಕಳೆದ ಬಾರಿಯೇ ಕೊಡಗು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸರ್ಕಾರ 50 ಲಕ್ಷ ಹಣ ಬಿಡುಗಡೆ ಮಾಡಿದೆ. ಆದರೆ ಇದುವರೆಗೆ ಟೆಂಡರ್ ಕರೆದಿಲ್ಲ. ಸಾರ್ವಜನಿಕರು ಪ್ರಶ್ನಿದ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಟೆಂಡರ್ ಕರೆಯಲಾಗುವುದು ಎಂದು ನೋಟಿಸ್ ಕೊಡಲಾಗಿದೆ. ಇದನ್ನು ಸಾರ್ವಜನಿಕರು ಸ್ಥಾನೀಯ ವೈದ್ಯಾಧಿಕಾರಿಯನ್ನು ಪ್ರಶ್ನಿಸಿದರೆ ಕೇವಲ ಸಮಜಾಯಿಷಿ ನೀಡುತ್ತಿದ್ದಾರೆ. ಈ ಕುರಿತು ಕೊಡಗು ವೈದ್ಯಾಧಿಕಾರಿಯವರನ್ನು ಕೇಳಿದರೆ, ಇದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಸಾರ್ವಜನಿಕರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಗೊತ್ತಾಗಿದೆ ಎನ್ನುತ್ತಾರೆ.
ಬಳಕೆಯಾಗದೆ ಇರುವ ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷಿನ್ ಅನ್ನು ತಕ್ಷಣದಲ್ಲೇ ಸ್ಥಳಾಂತರಿಸಲಾಗುವುದು. ಬಳಿಕ ಇಲ್ಲಿಗೆ ಹೊಸ ಮಷಿನ್ ಖರೀದಲಾಗುವುದು. ಅದಕ್ಕೆ ಇನ್ನೂ ಮೂರು ತಿಂಗಳು ಸಮಯಾವಕಾಶ ಬೇಕು ಎನ್ನುತ್ತಾರೆ ಕೊಡಗು ಡಿಎಚ್ಓ ಮೋಹನ್.
ಇದನ್ನೂ ಓದಿ: ಕೊಡಗಿಗೆ ಆಗಮಿಸಿದ ಎನ್ಡಿಆರ್ಎಫ್ ತಂಡ; ಮಳೆಗಾಲ ಎದುರಿಸಲು ಜಿಲ್ಲಾಡಳಿತ ಸಜ್ಜು
ಒಟ್ಟಿನಲ್ಲಿ ವೈದ್ಯೋ ನಾರಾಯಣೋ ಹರಿ ಎಂದು ನಂಬಿ ಬರುತ್ತಿರುವ ಬಡ ರೋಗಿಗಳ ಪಾಲಿಗೆ ಕೊಡಗು ಜಿಲ್ಲಾಸ್ಪತ್ರೆಯ ಕೆಲವು ವೈದ್ಯರು ಹಣ ಸುಲಿಗೆ ಮಾಡುವ ದಲ್ಲಾಳಿಗಳಾಗಿರೋದು ಮಾತ್ರ ನಿಜಕ್ಕೂ ವಿಪರ್ಯಾಸ.
ವರದಿ: ರವಿ ಎಸ್ ಹಳ್ಳಿ