- News18 Kannada
- Last Updated: April 15, 2021, 5:55 PM IST
- KISHAN KUMAR News18 Media
ಮಂಗಳೂರು: ಮಂಗಳೂರಿನ ಬಂದರಿನಿಂದ ಆರಬ್ಬಿ ಸಮುದ್ರದ 42 ನಾಟಿಕಲ್ ಮೈಲ್ ದೂರದಲ್ಲಿ ಉಂಟಾದ ಬೋಟ್ ಅವಘಡದಲ್ಲಿ ಒಟ್ಟು 14 ಮಂದಿಯಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ 9 ಮಂದಿಯನ್ನು ಆಳ ಸಮುದ್ರದಲ್ಲಿ ಹುಡುಕಾಟ ಮಾಡಲಾಗುತ್ತಿದೆ. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ವೇಲುಮುರುಗನ್ (37) ಹಾಗೂ ಪಶ್ಚಿಮ ಬಂಗಾಳದ ಕಾಕ್ದ್ವೀಪ್ ಜಿಲ್ಲೆಯ ಸುನೀಲ್ ದಾಸ್ (28) ಬೋಟ್ ದುರಂತದಲ್ಲಿ ಬದುಕುಳಿದಿದ್ದಾರೆ. ಕೋಸ್ಟ್ ಗಾರ್ಡ್ ಮೂರು ನೌಕೆ, ಎರಡು ಹೆಲಿಕಾಪ್ಟರ್ ಮೂಲಕ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.
ಕಡಲ ಮಧ್ಯೆ ಜೀವನ್ಮರಣ ಹೋರಾಟದ ಬಗ್ಗೆ ವೇಲುಮುರುಗನ್ ಮಾತನಾಡಿದ್ದು, ಸಾಕ್ಷಾತ್ ಯಮಧರ್ಮರಾಯನ ಜೊತೆ ಹೋರಾಡಿ ಗೆದ್ದು ಬಂದ ಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ದುರಂತದಲ್ಲಿ ಬದುಕುಳಿದ ಮೀನುಗಾರರು.
ವೇಲು ಮುರುಗನ್ ಹೇಳುವ ಪ್ರಕಾರ "ನಾನು ತಮಿಳುನಾಡು ಹಾಗೂ ಪಶ್ಚಿಮಬಂಗಾಳದ ಇತರ 13 ಜನರೊಂದಿಗೆ ಏಪ್ರಿಲ್ 11ರ ರವಿವಾರದಂದು ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಬೇಪೂರ್ನಿಂದ ಮೀನುಗಾರಿಕೆಗೆ ತೆರಳಿದ್ದೆವು. ಈ ವೇಳೆ ನಮಗೆ ಅಧಿಕ ಮೀನುಗಳು ದೊರಕದ ಕಾರಣ ನಾವು ಆಳ ಸಮುದ್ರ ಮೀನುಗಾರಿಕೆ ನಡೆಸಲು ನಿರ್ಧರಿಸಿದ್ದು, 70 ನಾಟಿಕಲ್ ಮೈಲುಗಳಷ್ಟು ದೂರ ಸಾಗಿದೆವು. ನಾವು ಮುಂದೆ ಚಲಿಸುತ್ತಿದ್ದಂತೆ ಹವಾಮಾನ ಸ್ಥಿತಿಯೂ ಕೆಟ್ಟದಾಗಿತ್ತು. ನಾವು ಮುಂದೆ ಸಾಗುತ್ತಿದ್ದಂತೆ ಮಳೆ ಸುರಿಯಲು ಆರಂಭವಾಯಿತು. ಬಳಿಕ ನಮ್ಮ ಬೋಟ್ನ ಸೀ ಮ್ಯಾನ್ ಊಟ ಮಾಡುವಂತೆ ತಿಳಿಸಿದರು. ಆದರೆ, ನಾವು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ಈ ವೇಳೆ ಬೋಟ್ನ ಎಲ್ಲಾ ಲೈಟ್ಗಳನ್ನು ಆನ್ ಮಾಡಲಾಗಿತ್ತು. ಊಟದ ಬಳಿಕ ನಾವೆಲ್ಲರೂ ವಿಶ್ರಾಂತಿ ಪಡೆದೆವು. ಸ್ವಲ್ಪ ಸಮಯದ ಬಳಿಕ ಭಾರೀ ಮಳೆ ಸುರಿಯಲು ಪ್ರಾರಂಭವಾಯಿತು. ನಾನು ಸೀ ಮ್ಯಾನ್ ಬಳಿ ಮಲಗಲು ಹೋದೆ. ಮಳೆ ಜೋರಾಗಿ ಸುರಿಯುತ್ತಿದ್ದ ಕಾರಣ ಅಲೆಗಳ ಉಬ್ಬರವಿಳಿತ ಹೆಚ್ಚಿರುವುದು ನಮ್ಮ ಗಮನಕ್ಕೆ ಬಂತು. ಹವಾಮಾನ ಕೂಡ ಹದಗೆಟ್ಟ ಕಾರಣ, ನಮ್ಮ ಮುಂದಿನ ದಾರಿಯೂ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ."
"ನಾನು ದಣಿದಿದ್ದ ಕಾರಣ ನಿದ್ರೆಗೆ ಜಾರಿದ್ದೆ. ಸ್ವಲ್ಪ ಸಮಯದ ಬಳಿಕ ದೊಡ್ಡ ಸದ್ದು ಕೇಳಿ ನನಗೆ ಎಚ್ಚರವಾಯಿತು. ಈ ವೇಳೆ ನಾನು ಎದ್ದೇಳಲು ಪ್ರಯತ್ನಿಸುತ್ತಿದ್ದೆ. ಜನರು ಕಿರುಚಾಡುತ್ತಿರುವುದು ನನಗೂ ಕೇಳಿಸುತ್ತಿತ್ತು. ಈ ವೇಳೆ ನಾನು ಕೂಡಾ ನೀರಿಗೆ ಬಿದ್ದೆ. ಕೆಲವು ಸಮಯದ ಬಳಿಕ ನಾನು ಬೋಟ್ ಮೇಲ್ಭಾಗವನ್ನು ತಲುಪಿದೆ. ನಮ್ಮ ಬೋಟ್ಗೆ ಹಡಗು ಢಿಕ್ಕಿಯಾಗಿತ್ತು. ಈ ವೇಳೆ ಹಡಗಿನ ಸಿಬ್ಬಂದಿಗಳು ನಮ್ಮನ್ನು ಪತ್ತೆ ಹಚ್ಚಿ ಹಡಗಿಗೆ ಬರಲು ಸಹಾಯ ಮಾಡಿದರು. ನಮಗೆ ಪ್ರಥಮ ಚಿಕಿತ್ಸೆ ನೀಡಿದರು. ಆ ಸಂದರ್ಭ ನನಗೆ ಮಾತನಾಡಲು ಕೂಡ ಆಗಲಿಲ್ಲ. ಮುಳುಗಿದ ಬೋಟ್ನಲ್ಲಿ ಇನ್ನೂ ಅನೇಕರು ಇದ್ದಾರೆ ಎಂದು ನಾನು ಅವರಿಗೆ ತಿಳಿಸಿದೆ. ಆದರೆ, ದುರಾದೃಷ್ಟವಶಾತ್ ನನಗೆ ಅವರನ್ನು ಹುಡುಕಲು ಆಗಲಿಲ್ಲ. ಬಡತನದ ಕಾರಣದಿಂದ ನಾನು ಹಾಗೂ ನನ್ನ ಕುಟುಂದ ಸದಸ್ಯರ ಜೀವನೋಪಾಯಕ್ಕಾಗಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದೇನೆ," ಅಂತಾ ವೇಲುಮುರುಗನ್ ಹೇಳಿದ್ದಾರೆ. ವೇಲುಮುರುಗನ್ ನಡೆದ ಘಟನೆ ಹೇಳುವ ಸಂಧರ್ಭದಲ್ಲಿ ಅವರ ಕಣ್ಣಾಲಿಗಳು ತೇವಗೊಂಡು, ಭೀಕರ ಸಮಯದ ಭಯದಿಂದ ಹೊರಗೆ ಬರಲಾರದ ಸ್ಥಿತಿಯಲ್ಲಿದ್ದರು.
ಇದನ್ನು ಓದಿ: ಸಾರಿಗೆ ಸಚಿವರ ತವರಿನಲ್ಲಿ ರಸ್ತೆಗಳಿದ ಬಸ್ಸುಗಳು; ಸವದಿ ಮಗ-ಸಾರಿಗೆ ನೌಕರರ ನಡುವಿನ ಸಂಧಾನ ಯಶಸ್ವಿ
ಬೋಟ್ ಮಾಲೀಕ ಜಾಫರ್ ಮಾತನಾಡಿ, ಕರಾವಳಿಯ ಭದ್ರತಾ ಪೊಲೀಸರ ಮೂಲಕ ಈ ಘಟನೆ ತಿಳಿದುಬಂದಿದೆ. ಬೋಟ್ ಡಿಕ್ಕಿಯಾಗಿದೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದರು. ಇದು ಆಘಾತಕಾರಿ ಘಟನೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇರಳದ ಕೋಝಿಕೋಡ್ ಜಿಲ್ಲೆಯ ಬೇಪೋರ್ ನಿಂದ 14 ಮಂದಿ ಮೀನುಗಾರರನ್ನು ಒಳಗೊಂಡ ರಭಾ (ID No KL 07 MM 5065) ಎಂಬ ಮೀನುಗಾರಿಕಾ ಬೋಟ್ ಕೋಸ್ಟ್ ಗಾರ್ಡ್ ಹಡಗಿಗೆ ಆಳ ಸಮುದ್ರದಲ್ಲಿ ಡಿಕ್ಕಿ ಹೊಡೆದಿತ್ತು.