- News18 Kannada
- Last Updated: April 16, 2021, 7:28 AM IST
ಕಾರವಾರ: ಕೋವಿಡ್ ಎರಡನೆ ಅಲೆಯ ನಿಯಂತ್ರಣಕ್ಕೆ ಮಹಾರಾಷ್ಟ್ರದಲ್ಲಿ ಕಠಿಣ ಕ್ರಮವನ್ನು ಜಾರಿಗೆ ತರಲಾಗಿದೆ. ಮಹಾರಾಷ್ಟ್ರದಿಂದ ಕರ್ನಾಟಕ ಪ್ರವೇಶ ಮಾಡುವವರಿಗೆ ರಾಜ್ಯ ಸರಕಾರ ಕೆಲವೊಂದು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಗಡಿಭಾಗದಲ್ಲಿಯೂ ಕೂಡ ಕಠಿಣ ಕ್ರಮ ಜಾರಿಯಲ್ಲಿ ಇದ್ದು ಗೋವಾ ಸರಕಾರ ತನ್ನ ಗಡಿಯಲ್ಲಿ ಯಾವುದೇ ಕಠಿಣ ನಿಯಮ ಜಾರಿಗೆ ತರದ ಹಿನ್ನಲೆಯಲ್ಲಿ ಮಹಾರಾಷ್ಟ್ರದಿಂದ ಗೋವಾ ಮೂಲಕ ಬರುವವರು ಕಣ್ಣು ತಪ್ಪಿಸಿ ಕರ್ನಾಟಕ ಪ್ರವೇಶ ಮಾಡುತ್ತಿದ್ದಾರೆ.
ಗೋವಾ ಸರಕಾರದ ನಿರ್ಲಕ್ಷ್ಯ
ಗೋವಾ ಸರಕಾರ ಗಡಿಯಲ್ಲಿ ಯಾವುದೇ ಕಠಿಣ ಕ್ರಮ ಜಾರಿಗೆ ತರದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಗೋವಾ ಗಡಿಯಲ್ಲಿ ಗೋವಾ ಸರಕಾರದಿಂದ ಯಾವುದೇ ಕಠಿಣ ನಿಯಮ ಜಾರಿ ಆಗಿಲ್ಲ. ಆದರೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಕರ್ನಾಟಕ ಗಡಿಯಲ್ಲಿ ಕೋವಿಡ್ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು, ಮಹಾರಾಷ್ಟ್ರದಿಂದ ಬರುವವರಿಗೆ ಕಠಿಣ ನಿಯಮ ಹೇರಿದೆ. 72 ಗಂಟೆಯೊಳಗೆ ಕೋವಿಡ್ ನೆಗೆಟಿವ್ ವರದಿ ತರದೆ ಇದ್ದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ವಾಪಸ್ ಕಳುಹಿಸುತ್ತಿದೆ. ಆದರೆ ಗೋವಾ ಸರಕಾರ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮಹಾರಾಷ್ಟ್ರದಿಂದ ಬರುವವರಿಗೆ ಮುಕ್ತವಾಗಿ ಕರ್ನಾಟಕ ಪ್ರವೇಶ ಮಾಡಲು ಬಿಡುತ್ತಿದೆ. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರದಿಂದ ಬರುವವರು ಗೋವಾ ನೋಂದಣಿ ವಾಹನವನ್ನು ಕೂಡಾ ಬಳಸುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಹೀಗೆ ಗೋವಾ ಸರಕಾರ ಗಡಿಯಲ್ಲಿ ನಿರ್ಲಕ್ಷ ವಹಿಸುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲಾಡಳಿತ ಟಫ್ ರೂಲ್ ಮುಂದುವರೆಸಿದೆ.
ಇದನ್ನು ಓದಿ: ಕೋವಿಡ್ ನಿಯಮ ಪಾಲನೆ ಪರಿಶೀಲನೆಗೆ ರಸ್ತೆಗಿಳಿದ ಕೊಡಗು ಜಿಲ್ಲಾಧಿಕಾರಿ ಚಾರುಲತಾ; 70 ಜನರಿಗೆ ದಂಡ!
ಮಹಾರಾಷ್ಟ್ರ ವಾಹನ್ ವಾಪಸ್ ಕಳುಹಿಸಿದ ಉತ್ತರಕನ್ನಡ ಜಿಲ್ಲಾ ಪೊಲೀಸರು
ಮಹಾರಾಷ್ಟ್ರದಿಂದ ಬಂದ ಕುಟುಂಬದವರು ಗೋವಾ ಮಾರ್ಗವಾಗಿ ಮಂಗಳೂರಿಗೆ ಹೋಗಲು ಬಂದಿದ್ದರು. ಗೋವಾ ಗಡಿಯಿಂದ ಮುಕ್ತವಾಗಿ ಬಂದ ಇವರಿಗೆ ಕರ್ನಾಟಕ ಗಡಿಯಲ್ಲಿ ಕಾರವಾರ ಪೋಲಿಸರು ತಡೆದು ತಪಾಸಣೆ ನಡೆಸಿದಾಗ ಮಹಾರಾಷ್ಟ್ರ ದಿಂದ ಬಂದವರು ಎಂದು ತಿಳಿದು ಇವರನ್ನು ವಾಪಸ್ ಗೋವಾ ಮರ್ಗವಾಗಿ ಕಳುಹಿಸಿದ್ದಾರೆ. ಬಂದವರ ಹತ್ತಿರ ಸರಕಾರದ ನಿಯಮದ ಪ್ರಕಾರ 72ಗಂಟೆ ಯೊಳಗಿನ ಕೋವಿಡ್ ನೆಗೆಟಿವ್ ವರದಿ ಇರಲಿಲ್ಲ. ಈ ಹಿನ್ನಲೆಯಲ್ಲಿ ಇವರನ್ನು ವಾಪಸ್ ಕಳುಹಿಸಲಾಯಿತು. ಜೊತೆಗೆ ಹೀಗೆ ಗೋವಾ ಮಾರ್ಗವಾಗಿ ಬಂದವರು ಗೋವಾದಿಂದ ಬಂದರೂ ಕಾರವಾರ ಗಡಿಯಲ್ಲಿ ಕಠಿಣ ಕ್ರಮ ಜಾರಿಯಲ್ಲಿ ಇರುವುದರಿಂದ ಮುಂದಿನ ಸಂಚಾರ ಕಷ್ಟವಾಗಿದೆ. ಹೀಗೆಲ್ಲಇರುವಾಗ ಗೋವಾ ಸರಕಾರ ಗಡಿಯಲ್ಲಿ ಯಾವುದೇ ಕಠಿಣ ನಿಯಮ ಜಾರಿಗೆ ಮುಂದಾಗಿಲ್ಲ.
ಕಾರವಾರ ಗಡಿಯಲ್ಲಿ ಗೋವಾ ಸರಕಾರ ಕೋವಿಡ್ ಟಫ್ ರೂಲ್ಸ್ ನಿಯಮ ಜಾರಿಗೆ ತಂದಿಲ್ಲ. ಮಹಾರಾಷ್ಟ್ರದಿಂದ ಗೋವಾ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಬರುವವರು ನೇರವಾಗಿ ಬರಬಹುದಾಗಿದೆ. ಮಹಾರಾಷ್ಟ್ರದಿಂದ ಬಂದವರು ನೇರವಾಗಿ ಗೋವಾಗೆ ಬಂದು ಬಳಿಕ ಗೋವಾ ನೋಂದಣಿ ಹೊಂದಿದ ಗೋವಾ ರಾಜ್ಯದ ಟ್ಯಾಕ್ಸಿ ಮೂಲಕ ರಾಜ್ಯಕ್ಕೆ ಬಂದು ಪ್ರವಾಸ ಕೈಗೊಂಡು ಪುನಃ ಗೋವಾ ಮೂಲಕ ಮಹಾರಾಷ್ಟ್ರಕ್ಕೆ ಹೋಗುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದ್ದೆ. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರದಿಂದ ಕೋವಿಡ್ ರಾಜ್ಯಕ್ಕೆ ಪಸರಿಸಲು ಗೋವಾ ಸೇತುವೆ ಆಗ್ತಿದ್ಯಾ ಎನ್ನೋ ಸಂಶಯ ಎಲ್ಲರದ್ದಾಗಿದೆ.