- News18 Kannada
- Last Updated: June 2, 2020, 10:11 PM IST
ಆನೇಕಲ್(ಜೂ.02): ಕೊರೊನಾ ಈಗಾಗಲೇ ರೈತ ಸೇರಿದಂತೆ ಎಲ್ಲರಿಗೂ ಮಗ್ಗಲ ಮುಳ್ಳಾಗಿದೆ. ಇದರ ನಡುವೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಅರಣ್ಯದಂಚಿನ ಗ್ರಾಮಗಳ ರೈತರ ಮೇಲೆ ಅರಣ್ಯ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಬೆಂಗಳೂರು ಸಂಸದ ಡಿ ಕೆ ಸುರೇಶ್ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದ್ದಾರೆ.
ಮುಂಗಾರು ಮಳೆ ಸುರಿದ ಬೆನ್ನಲ್ಲೇ ಇಲ್ಲಿನ ರೈತರು ಹೊಲ ಉಳುಮೆ ಮಾಡಲು ನಿನ್ನೆ ಮುಂದಾಗಿದ್ದರು. ರೈತರು ಹೊಲ ಉಳುಮೆ ಮಾಡುವ ವಿಚಾರ ತಿಳಿದ ಬನ್ನೇರುಘಟ್ಟ ವಲಯ ಅರಣ್ಯ ಅಧಿಕಾರಿಗಳು ಉಳುಮೆ ಮಾಡದಂತೆ ಅಡ್ಡಿಪಡಿಸಿದ್ದರು. ಈ ವೇಳೆ ಅರಣ್ಯ ಅಧಿಕಾರಿಗಳು ಮತ್ತು ರೈತರ ನಡುವೆ ವಾಗ್ವಾದ ಸಹ ನಡೆದಿತ್ತು. ಅರಣ್ಯ ಅಧಿಕಾರಿಗಳು ಇದನ್ನೆ ನೆಪವಾಗಿಟ್ಟುಕೊಂಡು ರೈತರ ಮೇಲೆ ಇಲ್ಲಸಲ್ಲದ ಸುಳ್ಳು ಕೇಸ್ಗಳನ್ನು ದಾಖಲಿಸಿದ್ದರು. ಈ ಬಗ್ಗೆ ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಡಿ ಕೆ ಸುರೇಶ್ ರೈತರೊಂದಿಗೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಸಾಮಾನ್ಯರಿಗೊಂದು ನ್ಯಾಯ, ಸಚಿವರಿಗೊಂದು ನ್ಯಾಯ! ಸಾಮಾಜಿಕ ಅಂತರ ಗಾಳಿಗೆ ತೂರಿದ ಶ್ರೀರಾಮುಲು
ಇನ್ನು, 1960 -1961 ಇಸವಿಯಲ್ಲಿ ಬ್ಯಾಲಮರನ ದೊಡ್ಡಿಯಲ್ಲಿ ವಾಸವಿರುವ ನಿವಾಸಿಗಳಿಗೆ ಸಾಗುವಳಿ ಪತ್ರ ನೀಡಿದ್ದಾರೆ. ಆದ್ರೆ 2006ರಲ್ಲಿ ಅರಣ್ಯ ಇಲಾಖೆಯು ರೈತರು ಉಳುಮೆ ಮಾಡುತ್ತಿರುವ ಜಮೀನು ತಮಗೆ ಸೇರಿದ್ದು ಎನ್ನುತ್ತಿದ್ದಾರೆ. ದಶಕಗಳಿಂದ ಉಳುಮೆ ಮಾಡುತ್ತಾ ಬಂದಿದ್ದ ರೈತರಿಗೆ ಇಂದು ಅರಣ್ಯ ಅರಣ್ಯಾಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ. ಜೊತೆಗೆ ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳಿಗು ಸಹ ಅಡ್ಡಿ ಮಾಡುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜೊತೆಗೆ ರೈತರಿಗೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ತಿಳಿಸಿದ್ದಾರೆ.
ದಶಕಗಳಿಂದ ರೈತರು ನೂರಕ್ಕೂ ಅಧಿಕೆ ಎಕರೆ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಂದಿನಿಂದ ಸುಮ್ಮನಿದ್ದ ಅರಣ್ಯ ಅಧಿಕಾರಿಗಳು ಇತ್ತೀಚೆಗೆ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ ರೈತರ ಸಮಸ್ಯೆಗೆ ಇತಿಶ್ರೀ ಹಾಡಬೇಕಿದೆ.
(ವರದಿ: ಆದೂರು ಚಂದ್ರು)